Thursday, July 21, 2011

ಧನ್ಯವಾದಗಳೊಂದಿಗೆ...

ಬಸವನಗುಡಿಯ ರಾಮಕೃಷ್ಣ ಆಶ್ರಮದ ಸರ್ಕಲ್‍ನಿಂದ ಗಾಂಧಿಬಜಾರ್ ಕಡೆಗೆ ಹೋಗುವಾಗ, ಎಡಗಡೆಗೆ ನೊಕಿಯಾದ ಸಾಫ್ಟ್ ವೇರ್ ಆಫೀಸ್ ಎದ್ದು ಕಾಣುತ್ತಿತ್ತು. ಜಗತ್ತಿನ ಬಹುಭಾಗದ ಜನಸ್ತೋಮದ ಜೀವನಕ್ಕೆ ಮೊಬೈಲ್‍ನ್ನು ಅವಿಭಾಜ್ಯ ಹಾಗೂ ಅನಿವಾರ್ಯ ಅವಶ್ಯಕತೆಯನ್ನಾಗಿ ಮಾಡಿಸಿದ ದೈತ್ಯ. ಫಿನ್‍ಲ್ಯಾಂಡ್ ಎನ್ನುವ ಸಣ್ಣ ದೇಶದ ಕಂಪೆನಿ. "ಇಂತಹದೊಂದು ಕಂಪೆನಿಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕರೇ...?" ಆಗಿನ ದಿನಗಳಲ್ಲಿ ಇದೊಂದು ಆಸೆ, ದೇವರಲ್ಲಿ ಇಟ್ಟ ಕೋರಿಕೆ.
ನನಸಾಗುವ ಯಾವ ಭರವಸೆಯಿರಲಿಲ್ಲ. ಆದರೆ ೦೧-ಜೂನ್-೨೦೦೬ ರಂದು ನನ್ನ ಭರವಸೆ ಹುಸಿಯಾಯಿತು, ಕೋರಿಕೆ ನಿಜವಾಯಿತು.

೫ ವರ್ಷಗಳೇ ಕಳೇದಿವೆ. ನನ್ನ ಔದ್ಯೋಗಿಕ ಹಾಗೂ ವ್ಯಯಕ್ತಿಕ ಜೀವನದಲ್ಲಿ ಎಷ್ಟೊಂದು ಉತ್ತಮ ಬದಲಾವಣೆಗಳಾಗಿವೆ. ನನ್ನ ಮುಂದಿನ ನೆಲೆಯನ್ನು ಅರಸುತ್ತಾ, ಈ ಕನಸಿನ ಕಂಪನಿಯನ್ನು ೨೨-ಜುಲೈ-೨೦೧೧ ರಂದು ಬಿಟ್ಟು ಹೋರಟಿರುವೆ.

ಮನುಷ್ಯ ಮೂಲತಃ ಸಾಂಘಿಕ ಜೀವಿ. ಆದರೂ, ಮೊದಲು ಹುಡುಕುವುದು ತನ್ನ ನೆಲೆಯನ್ನು. ಹೀಗೆ, ಆ ನೆಲೆಯನ್ನು ಅರಸುತ್ತಾ ಹೊರಟು, ಇದೇ ನೊಕಿಯಾಗೆ ಬಂದ ಹಲವಾರು ವ್ಯಕ್ತಿಗಳಲ್ಲಿ,ನೀವುಗಳು ನನ್ನ ಜೀವನದ ಹಾಸು ಹೊಕ್ಕಾದಿರಿ. ಹೀಗೋಂದು ದಿನ..., ಹಾಗೊಂದು ಸಂಜೆ... ಅಂತಾ ಯಾವುದು ಇಲ್ಲ. ಈ ಸಂಬಂಧಗಳು ಬೆಸೆದು ಕೊಳ್ಳುವುದೇ ಹೀಗೆ. "ಇಲ್ಲಿಗೆ ನನ್ನ ಪಯಣ ಮುಗಿಯಿತು" ಎಂದು ಗೊತ್ತಾದ ದಿನವೇ ಅರಿವಿಗೆ ಬರುವುದು - ಈ ಸಂಬಂಧಗಳು ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಹಾಸುಹೊಕ್ಕಾಗಿವೆ ಎಂದು.

ಕೈಯಲ್ಲಿ ಹಿಡಿದ ಮಂಜುಗಡ್ಡೆ, ಕಣ್ಣೆದುರಿಗೆ ಕರಗುವಂತೆ - ಈ ದೈನಂದಿಕ ಭೇಟಿ, ಹರಟೆ, ಜೊತೆಯಲ್ಲಿ ಟೀ, ಕಾಫಿ, ತಿಂಡಿ, ಮಧ್ಯಾಹ್ನದ ಊಟ, ಇನ್ನು ೧-೨ ದಿನಗಳು ಮಾತ್ರ. ಇಂದು ಮಾಹಿತಿ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಫೇಸ್‍ಬುಕ್, ಟ್ವಿಟರ್ ನಂತಹ ಸೊಶಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್‍ಗಳು ಇರುವುದರಿಂದ, ಒಬ್ಬರನ್ನೊಬ್ಬರು ಸದಾ ಭೇಟಿಯಲ್ಲಿಟ್ಟು ಕೊಳ್ಳಬಹುದು. ನಿಜ. ಆದರೆ, ತಂತ್ರಜ್ಞಾನ ಒಂದು ಅನುಕೂಲತೆಯೇ ಹೊರತು ಪ್ರಸ್ತುತ ವಸ್ತು-ಸ್ಥಿತಿಯ, ನೈಜತೆಯ ಬದಲು( Replacement ) ಅಲ್ಲ. ನಾವು ಮತ್ತೇ-ಮತ್ತೇ ಭೇಟಿಯಾಗಬಹುದು, ಆಗಾಗ ಸಿಗಬಹುದು. ಹೌದು, ಅದು ನಿಜವೇ. ನಾನು ಹೇಳುತಿರುವುದು - ಹೇಳು-ಕೇಳುಗೆಗೆ, ಆ ಟೀಕೆ-ಟಿಪ್ಪಣಿಗಳ ಹರಟೆಗೆ, ಆ ಸಣ್ಣ-ಪುಟ್ಟ ಗೆಲುವು-ನಲಿವುಗಳ ಹಂಚಿಕೆಯ ಸಹಭಾಗಿತ್ವಕ್ಕೆ, ನಿಮ್ಮಗಳ ಜೊತೆಗಿನ ಒಡನಾಟ, ದಿನ ಬೆಳಗಾದರೇ ಮತ್ತೇ ಸಿಗೋಲ್ಲಾ ಎನ್ನುವ ಅಗಲಿಕೆಯ ನೋವಿನ ಬಗ್ಗೆ.

ಮುಂದಿನ ಪಯಣದಲ್ಲಿ ಮತ್ತೆ ಹೊಸ ಸಂಬಂಧಗಳು ಚಿಗುರುವವು. ಅಲ್ಲಿಯೂ ಸಹ ಇವೆಲ್ಲಾ ಇರುತ್ತವೆ ಅನ್ನುವ ಭರವಸೆ ನನಗಿದೆ. ಸಾಂಘಿಕ ಜೀವಿಯಾದ ಮನುಷ್ಯ, ಎಲ್ಲಿ ಹೋದರು - ಸಂಘ ರೂಪಿಸಿಯೇ ಕೊಳ್ಳುತ್ತಾನೆ. "ಸಂಘದೋಷ!" ವಿದ್ದೇ ಇರುತ್ತದೆ. ಆದರೆ "ಇಲ್ಲಿನ ಈ ಋಣ" ಮುಗಿಯಿತು. ನನ್ನ ನೋವು-ನಲಿವುಗಳಿಗೆ ಸ್ಪಂದಿಸಿದ ನಿಮ್ಮ ಇರುವಿಕೆ ನನ್ನ ಆವರಣದೊಳಗಿರುವುದಿಲ್ಲ. ಇಂತಹ ಅಗಲಿಕೆ, ಕಳಚಿದ ಸಂಬಂಧದ ಕೊಂಡಿ, ಒಂದು ಹೇಳಿಕೊಳ್ಳಲಾರದ ನೋವೇ.

ಈಗಿರುವ ಈ ನೆಲೆಯಲ್ಲಿ ಸಹ-ಪಯಣಿಕರಾಗಿ ಸಿಕ್ಕ ನೀವು, ನನ್ನ ಜೀವನದ ಪಯಣಕ್ಕೆ ರೂಪು-ರಂಗು-ರೇಶೆಗಳನ್ನು ತುಂಬಿದಿರಿ. ಪಯಣದ ನೆನಪನ್ನು ಮಧುರವಾಗಿಸಿದಿರಿ. ಮುಂಬರುವ ಪಯಣಕ್ಕೆ ಸಹಸ್ರ-ಸಹಸ್ರ ನೆನೆಪಿಕ ಕಾಣಿಕೆಗಳನ್ನು ನನ್ನ ಜೋಗುಳಿಯಲ್ಲಿ ತುಂಬಿ ಕಳಿಸುತ್ತಿರುವ ನಿಮಗೆ ನಾನು ಚಿರಋಣಿ, ಕೃತಙ್ಞ.

ಮುಂದಿನ ಕರ್ಮಋಣ ಕೈಬೀಸಿ ಕರೆದಾಗ, ಆ ಕರ್ತವ್ಯವನ್ನು ಅರಸಿ ಹೊರಟವನೇ ನಾನು. ಆದರೆ, ಆ ಆಯ್ಕೆಯಲ್ಲಿ ಅನಿವಾರ್ಯತೆ ಅಡಗಿದೆ. ಸಿಕ್ಕ ಉತ್ತಮ ಅವಕಾಶಗಳ ಒಪ್ಪಿಕೊಂಡ ಆನಂದದ ಆ ಭಾವದಲ್ಲಿ, ಅಗಲಿಕೆಯ ನೋವು ಹೆಜ್ಜೆ ಹಾಕಿದೆ.

ಆನಂದದ ಭಾಷ್ಪದೀ
ಅಗಲಿಕೆಯ ಈ ನೋವು
ತಾ ಮಿಂದು-ಜೊತೆ ನಿಂತಿರಲು,
ನೆಲೆಯ ಅರಸುತ ಹೊರಟ
ಈ ಪಯಣಿಗನ ಕತೆಯಲಿ,
ಸಮಯದೀ ಸಮಾಧಿಯ
ಸೇರಿದ ಋಣಕೇ,
ನೆನಪುಗಳೇ ಆವರಣ,
ಆ ಚಿರನಿದ್ರೆಯ
ಅಲಂಕರಣ!

ಧನ್ಯವಾದಗಳೊಂದಿಗೆ...

Wednesday, April 20, 2011

ತಿಕ್ಲಾ?!!

ನಾನು ಕೆಲಸ ಮಾಡುವ ಟೀಮ್‍ನಲ್ಲಿ ನಾವುಗಳು ೨೫-೩೦ ಜನರಿದ್ದೇವೆ. ಪ್ರತಿವರ್ಷದಂತೆ, ಈ ಸಲವೂ ಟೀಮ್ ಔಟಿಂಗ್ ಹೋಗಬೇಕಿತ್ತು. ಎಲ್ಲಾ ಹುಡುಕಾಟದ ನಂತರ, ನಮ್ಮ ಬಜೆಟ್‍ಗೇ ಸರಿಹೊಂದುವ ಹಾಗೇ ನೋಡಿಕೊಂಡು, ನಮ್ಮ ಟೀಮ್-ಸಹಾಯಕಿಯ ನಿರ್ದೇಶನದಲ್ಲಿ, ಬನ್ನೇರುಘಟ್ಟ ರಸ್ತೆಯಲ್ಲಿರುವ, Confident Cascade ರೆಸಾರ್ಟ್‍ ‍ಗೆ, ನಮ್ಮ ಟೀಮ್ ಔಟಿಂಗ್ ಹೊರಟಿತು. ಎಲ್ಲಾ ರಿಸಾರ್ಟ್‍‍‍ಗಳಲ್ಲಿರುವ ಹಾಗೇ, ಅಲ್ಲಿ ಕೂಡ ಕ್ರಿಕೆಟ್, ಶಟಲ್, Swimming Pool ಈ ರೀತಿ ಬೇರೆ ಬೇರೆ ಸವಲತ್ತುಗಳು ಇದ್ದವು. ನಾವೆಲ್ಲಾ ಗುಂಪುಗಳಲ್ಲಿ ಚದರಿಕೊಂಡು ನಮಗಿಷ್ಟವಿರುವ ಆಟಗಳಲ್ಲಿ ತೊಡಗಿದೆವು. ಹಾಗೇ, ಮಧಾಹ್ನವಾಯಿತು; ಬೇಸಿಗೆಯ ಸುಡೋ ಬಿಸಿಲು ಬೇರೆ. ಊಟ ಮುಗಿಯುವಷ್ಟರಲ್ಲಿ ಸುಮಾರು ೨.೩೦ ಗಂಟೆ ಆಗಿತ್ತು.

ಊಟ ಮುಗಿದಿದ್ದೆ ತಡ, ೧೪-೧೫ ಮಂದಿಗಳ ನಮ್ಮ ಗುಂಪು Swimming Pool ಕಡೆ ಹೊರಟಿತು.
ನನಗೋ ಈಜು, ನೀರನಲ್ಲಿ ಆಟವಾಡೋದು ಅಂದ್ರೆ ಬಹಳ ಇಷ್ಟ. ಬೇಸಿಗೆಯ ಬಿಸಿಲಿನಲ್ಲಿ ಯಾರಿಗೇ ತಾನೇ ಇಷ್ಟವಿರೊಲ್ಲಾ ಹೇಳಿ? ನೀರಿಗಿಳಿದ್ದಿದ್ದೇ ತಡ, ಒಂದೆರಡು ರೌಂಡ್ ಈಜು ಹೋಡೆದೆ.

ಒಬ್ಬರ ಹಿಂದೊಬ್ಬರಂತೆ, ಎಲ್ಲರೂ ನೀರಿಗಿಳಿದಂತೆ, ಶುರುವಾಯಿತು ವಾಲಿಬಾಲ್ ಆಟ.
೭-೮ ಜನರ ೨ ತಂಡಗಳು. ಊಟ ಮುಗಿಸಿಕೊಂಡು ಬಂದಿದ್ದ ಎಲ್ಲರೂ, ಒಳ್ಳೇ ಹುಮ್ಮಸಿನಲ್ಲಿದ್ದರು.
ಭರ್ಜರಿ ಆಟ ನಡೆಯಿತು. ನಮ್ಮದೊಂದು ಯುಕ್ತಿ, ಅವರದೊಂದು ಯುಕ್ತಿಯಂತೇ, ಒಳ್ಳೇ ಜಟಾಪಟಿಯಲ್ಲಿ, ಸಮಯ ಕಳೇದದ್ದೇ ಗೊತ್ತಾಗಲಿಲ್ಲ. ಸುಮಾರು ೩ ಗಂಟೆಗಳ ಕಾಲ ನೀರಿನಲ್ಲೇ ಕಳೇದೆವು. ಸಾಕಷ್ಟು ಆಟವಾಡಿದ್ದೇವು. ೫.೩೦ ಆಗುತ್ತಿದ್ದಂತೇ, ಒಬ್ಬೊಬ್ಬರೇ, ಹೊರಗೆ ಬರತೊಡಗಿದರು.

ನಾನು ಹೊರಬರುವ ಮೊದಲು, ಒಂದೆರಡು ರೌಂಡ್ ಈಜು ಹೊಡೆದು, ನಂತರ ಹೊರನಡೆದೆ.

ಮತ್ತೊಮ್ಮೆ ಸ್ನಾನ ಮಾಡಿ, ಬಟ್ಟೆ ತೊಟ್ಟು, ಅಲ್ಲಿಂದ, ಸರಿಯಾಗಿ ಸುಸ್ತಾಗಿದ್ದ ನಾವು, ಟೀ-ತಿಂಡಿ ತಿನ್ನಲು ಹೊರಟೆವು. ತಿಂಡಿ ಮುಗಿಯಿತು. ಸಂಜೆ ೬ ಗಂಟೆಯಾಗುತ್ತಿತ್ತು. ಜೊತೆಯಲ್ಲಿದ್ದ ಲೋಹಿತ್ ಹಾಗೇನೇ ಮಾತು ಶುರು ಮಾಡಿದ -

"ಆಗಲೇ ಮೈಯಲ್ಲಿ ನೋವು ಕಾಣಿಸುತ್ತಿದ್ದೆ ಕಣೋ"
"ಹೌದಾ, ನನಗೇನು ಹಾಗನ್ನಿಸುತಿಲ್ಲ. ಫುಲ್ ಫ್ರೆಶ್ ಅನ್ನಿಸ್ತಿದೆ. ಈಗ ತಾನೇ ನೀರಿನಿಂದ ಬಂದೇವಲ್ಲಾ" ನಾನು ಹೇಳಿದೆ.
"ನೀನು, ಗೋಲ್ ಕೀಪಿಂಗ್ ಮಾಡಿದೆ ಬಿಡಪ್ಪಾ. ಅಷ್ಟೇನೂ ನೀರಿನಲ್ಲಿ ಅಲ್ಲಿಂದಿಲ್ಲಿಂದಲ್ಲಿಗೆ ಓಡಾಡಿಲ್ಲಾ. ಅದಕ್ಕೇ ನಿನಗೆ ಹಾಗನಿಸುತ್ತಿರಬಹುದು".
ಅವನು ಹೇಳಿದ್ದು ಸರಿಯನಿಸಿತು.

ಅಲ್ಲಿಂದ, ನಾವೆಲ್ಲಾ ಬಂದ ಬಸ್ಸನಲ್ಲಿ ಮನೆಗೆ ಹೊರಟೆವು. ಸ್ವಲ್ಪ ಹೊತ್ತು ಕಳೆಯಿತು, ನನಗೂ ಕೂಡ ಮೆಲ್ಲಗೆ ಭುಜಗಳಲ್ಲಿ ನೋವು ಶುರುವಾಯಿತು. ನಾವು ಜಯನಗರಕ್ಕೆ ಬರುವಷ್ಟರಲ್ಲಿ ಭುಜಗಳಲ್ಲಿ ತೀವ್ರವಾಗಿ ನೋವಾಗುತ್ತಿತ್ತು. "ಮನೆಗೆ ಹೋದ ಮೇಲೆ, ಭುಜಗಳಿಗೆ ಎಣ್ಣೆನೊ, ಮೊವ್‍ನ್ನೊ ಹಚ್ಚಿಕೊಳ್ಳೊಣ" ಎಂದು ನನ್ನಷ್ಟಕ್ಕೆ ನಾನು ಸಮಾಧಾನ ಮಾಡಿಕೊಳ್ಳುತ್ತಾ, ಹಾಗೂ-ಹೀಗೂ ಮಾಡಿ ಮನೆ ಸೇರಿದೆ.

ಪ್ರತಿಸಲ ಟೀಮ್ ಔಟಿಂಗ್ ಹೋದಾಗ, ನನ್ನದು ಇದೇ ಹಣೇ ಬರಹ. ಬಂದ ಒಂದೇರಡು ದಿವಸ - "ಯವ್ವಾ, ಯಪ್ಪಾ, ಯಮ್ಮಾ" ಅಂತ ನೋವಿನಿಂದ ಪರದಾಡೋದು. ಅದಕ್ಕೇ, ಪ್ರತಿಸಲೇ ಟೀಮ್ ಔಟಿಂಗ್ ಹೋಗುವ ಮುನ್ನಾ, ನನ್ನ ಹೆಂಡತಿ - "ತುಂಬಾ ಆಟವಾಡಬೇಡಿ, ಒಂದು ಇತಿ-ಮಿತಿಯಿರಲಿ" ಅಂತಾ ಬುದ್ದಿವಾದ ಹೇಳಿಯೇ ಕಳಿಸುತ್ತಿದ್ದಳು.

ಆದರೆ, ಈ ಸಲವೇಕೋ, ನೋವು ತುಂಬಾ ತೀವ್ರವಾಗಿತ್ತು. ಮನೆಗೆ ಬಂದವನೇ, "ದೊಪ್ಪ್" ಎಂದು ಹಾಲ್‍ನಲ್ಲೆ ಇದ್ದ ದಿವಾನ್‍ಕಾಟ್ ಮೇಲೆ ಬಿದ್ದು ಕೊಂಡೆ. ಏನಾಗಿದೆಯೆಂದು, ನನ್ನ ಹೆಂಡತಿಗೆ ಗೊತ್ತಾಯ್ತು. ಅವಳು ಸುಮ್ಮನೇ ಇದ್ದಳು.

ಸ್ವಲ್ಪ ಹೊತ್ತು ಆದ ಮೇಲೆ, ಹೇಗೊ ಎದ್ದು ಮೇಲೆ ಹೋಗಿ ಬಟ್ಟೆ ಬದಲಿಸಿ, ಮುವ್ ಹಚ್ಚಿಕೊಂಡು, ಮೆಲ್ಲಗೆ ಭುಜಗಳನ್ನು ತಿಕ್ಕಿಕೊಳ್ಳುತ್ತಾ, ಡ್ರೆಸಿಂಗ್ ಮೀರರ್ ಎದುರಿಗೆ ಕುಳಿತೆ. ನನ್ನ ಹೆಂಡತಿ ಜೂಸ್ ಮಾಡಿಕೊಂಡು ಮೇಲೆ ಬಂದಳು. ನನ್ನ ಕೈಗೆ ಕೊಟ್ಟು, ನನ್ನ ಅವಸ್ಥೆಯನ್ನು ನೋಡಿ, "ಇವ್ರ ಹಣೇಬರಹ ಇಷ್ಟೇ!" ಅನ್ನೊ ದೃಷ್ಟಿ ಬೀರುತ್ತಾ, ಆ ಕಡೆಗೆ ಹೋಗಿ, ಲ್ಯಾಪ್-ಟಾಪ್ ನಲ್ಲಿ internet browsing ಮಾಡುತ್ತಾ ಕುಳಿತಳು. ಅವಳಿಗೇ ಗೊತ್ತು, ನಾನು ಏನೂ ಮಾಡಿದೇನೇ ಅಂತಾ. ಅದಕ್ಕೇ, ಅವಳೇನು ಕೇಳಲೂ ಇಲ್ಲಾ. ಅಲ್ಲದೇ, ಅವಳ ಸಲಹೆಯನ್ನು ನಾನು ಪಾಲಿಸಿರಲಿಲ್ಲ, ಎಂಬ ಸಿಟ್ಟು ಅವಳ ಮೂಗಿನ ಮೇಲೆ ನಲಿದಾಡುತಿತ್ತು.

ಜೂಸ್ ಕುಡಿಯುತ್ತಾ, "ಹೇಳಿದ್ದೇ - ಹೇಳೋ ಕಿಸುಬಾಯಿದಾಸ", ಅನ್ನೋ ಹಾಗೇ - "ನೀರಿನಲ್ಲಿ ಆಟ ಆಡಿದೇವು, ೨-೩ ರೌಂಡ್ ಈಜು ಹೋಡೆದೆ. ಈ ಸಲೇ ಯಾಕೋ ನೋವು ಸ್ವಲ್ಪ ಜಾಸ್ತಿ ಕಾಣಿಸಿಕೊಂಡಿದೆ....ಅದು...ಇದು..." , ನಾನು ಮತ್ತೇ ಅದೇ ಕತೇನಾ ಹೇಳುತ್ತಾ ಇದ್ದೆ. ಮಧ್ಯದಲ್ಲಿ - "ಅಯ್ಯೊ, ಯಪ್ಪಾ, ಶಿವನೇ, ತಂದೇ, ಶಂಭೋ ಶಂಕರ..." ಅಂತಾ ನನ್ನಾ ಯಾತನೆಯನ್ನು ತೋಡಿಕೊಳ್ಳುತ್ತಿದ್ದೆ.


"ತಿಕ್ಲಾ ನಿಮಗೆ?", internet surfing ಮಾಡುತ್ತಿದ್ದ ನನ್ನ ಹೆಂಡತಿ, ನನ್ನ ಮಾತಿನ ಮದ್ಯದಲ್ಲಿ ಬಾಯಿ ಹಾಕಿದಳು.
ಮೊದಲೆ ನೋವಿನಿಂದ ನಾನು ಒದ್ದಾಡುತ್ತಿರುವಾಗಾ, "ಏನೂ ಇವಳು? ತಿಕ್ಲು-ಗಿಕ್ಲು ಅಂತ ಎಲ್ಲಾ ಮಾತಾಡ್‍ತಿದ್ದಾಳೇ" ಅಂತಾ ನನಗೆ ಸಿಟ್ಟೇ ಬಂತು.


ನಾನು ಮಾಡಿದ್ದು ಸರಿಯಾಗಿಯೇ ಇತ್ತು ಅಂತಾ ನಿರೂಪಿಸಲು - "ನನಗೆ ಗೊತ್ತಿತ್ತು ಮೈಯಲ್ಲಿ ನೋವು ಕಾಣಿಸುತ್ತೆ ಅಂತಾ. ಆದರೆ, ಈ ಸಲ ಯಾಕೋ ತಾಳಲಾರದಷ್ಟು ಆಗಿದೆ. ಅದು ಅಲ್ಲದೇ, ನಾವು, ಸಾಫ್ಟ್ ವೇರ್ ಇಂಜಿನಯರ್‍ಗಳು ದಿನಾಲು ವ್ಯಾಯಾಮಾವಂತು ಮಾಡೊದಿಲ್ಲ. ಇಂತಹ ಪ್ರಸಂಗಗಳು ಬಂದಾಗ ಚೆನ್ನಾಗಿ ಆಟ ಆಡಿ, ಮೈ-ಕೈಗೆ ಸ್ವಲ್ಪ ವ್ಯಾಯಮವನ್ನು ಕೊಟ್ಟರೆ ಒಳ್ಳೆಯದು. ಅದಕ್ಕೇ ಅಷ್ಟೆಲ್ಲಾ ಆಟವಾಡಿದ್ದು..." ಒಂದು ೫ ನಿಮಿಷ ಭಾಷಣ ಕೊಟ್ಟೆ. ಅದರಲ್ಲಿ, "ನೀನು ಕೂಡಾ ಸಾಫ್ಟ್ ವೇರ್ ಇಂಜಿನಿಯರ್, ನಿನಗ ನನ್ನಷ್ಟು ಆರೋಗ್ಯದ ಬಗ್ಗೆ ಕಾಳಜೀ ಇಲ್ಲಾ...", ಅನ್ನೋ ತಿರುಗುಬಾಣಗಳು ಇದ್ದವು.


ನಾನು ಹೇಳುವುದನ್ನೆಲ್ಲಾ ಸುಮ್ಮನೆ ಕೇಳುತ್ತಿದ್ದಳು. ಮಧ್ಯದಲ್ಲಿ ಎಲ್ಲಿ ಮತ್ತೇ ಬಾಯಿ ಹಾಕುತ್ತಾಳೋ ಎಂದು, ನಾನೂ ಅವಳಿಗೆ ಮಾತಾಡಲು ಅವಕಾಶ ಕೊಡಲಿಲ್ಲ.

ನನ್ನ ಎಲ್ಲಾ ಮಾತು ಮುಗಿದ ಮೇಲೆ, ಅವಳು - "ನಿಮಗೆ ಕೈ ಎತ್ತಲೂ ನೋವಾಗುತ್ತಿದೆ. ಭುಜಗಳನ್ನು ತಿಕ್ಕಿಕೊಳ್ಳಲು ಪ್ರಯತ್ನಿಸುತ್ತಿರುವ ನಿಮಗೆ, ನಾನು - ಏನಾದರೂ ಸಹಾಯ ಮಾಡಲಾ? ತಿಕ್ಕಲಾ? ಅನ್ನುವ ಅರ್ಥದಲ್ಲಿ ಕೇಳಿದ್ದು. ಹೊರತಾಗಿ, ಗೊತ್ತಿದ್ದು...ಗೊತ್ತಿದ್ದು...ಈ ರೀತಿ ನೋವು ಮಾಡಿಕೊಂಡು ಬಂದಿರಲ್ಲಾ, ನಿಮಗೇ ತಿಕ್ಲಾ? ಅನ್ನೊ ಅರ್ಥದಲ್ಲಿ ಅಲ್ಲಾ" ಅಂತಾ ಹೇಳಿದಳು!

ಇದನ್ನು ಕೇಳಿ, ನಾನೇ ಹಳ್ಳ ತೋಡಿಕೊಂಡು, ಅದರಲ್ಲಿ ಮುಗ್ಗರಿಸಿ ಬಿದ್ದ ಹಾಗಾಗ್ಗಿತ್ತು.ಸುಮ್ನೇ ಇದ್ದೇ. ಅವಳೇ ಎದ್ದು ಬಂದು, ಭುಜಕ್ಕೆ ಮುವ್ ಹಚ್ಚಿ ತಿಕ್ಕಿದಳು. ಎಷ್ಟು ಹೊತ್ತಾದರು ನೋವು ಹೋಗುವ ಲಕ್ಷಣವೇ ತೋರಲಿಲ್ಲ. ಭುಜದ ಮೇಲೆ ಯಾವುದೇ ಭಾರ ಹಾಕುವ ಸ್ಥಿತಿಯಲಿರಲಿಲ್ಲ. ಏಳುವಾಗ-ಕುಳಿತುಕೊಳ್ಳುವಾಗ, ಕೈ ಯ ಆಧಾರ ತೆಗೆದುಕೊಳ್ಳಲೇ ಬೇಕು. ನನ್ನಿಂದ ಆಗುತ್ತಲೇ ಇರಲಿಲ್ಲ.



ನಾನು ನನ್ನ ಕೆಲವು ಸಿದ್ದಾಂತವನ್ನು, ಬಿಟ್ಟು ಕೊಡಲು ಸಿದ್ದವಿರಲಿಲ್ಲ - "ಗುಳಿಗೆ ತೆಗೆದುಕೊಳ್ಳುವುದು ಬೇಡ, ಮೈಯಲ್ಲಿ ಸ್ವಲ್ಪವಾದರೂ ನೋವನ್ನು ತಾಳಿಕೊಳ್ಳುವ ಶಕ್ತಿ ಇರಬೇಕು. ಇಷ್ಟಕ್ಕೆಲ್ಲಾ, ಮಾತ್ರೆ-ಗುಳಿಗೆ ಅಂದ್ರೆ ಹೇಗೆ?" ಎಂದು ಒಂದೇರಡೂ ಗಂಟೆ ದೂಡಿದೆ. ಇದಾಗಲೇ, ನನಗೆ ಮುಖಭಂಗವಾಗಿತ್ತು. ಹೀಗಾದರೂ ಮಾಡಿ, ನನ್ನಲ್ಲಿ, ನೋವನ್ನು ತಾಳಿಕೊಳ್ಳುವ ಶಕ್ತಿಯಿದೆಯೆಂದು ತೋರಿಸಿಕೊಳ್ಳಬೇಕಿತ್ತು. ರಾತ್ರಿ ೧೦ ಆಯಿತು, ನನ್ನ ಹೆಂಡತಿಯ ಕೈಯಿಂದಲೇ, ಊಟವೂ ಆಯಿತು. ಯಾರಪ್ಪನ ಹೆಸರೂ ಹೇಳಿದರೂ, ನೋವು ನನ್ನ ಭುಜ ಬಿಟ್ಟು ತೊಲಗಲಿಲ್ಲ.



ನನ್ನ ಸಿದ್ದಾಂತದ ಬಗ್ಗೆ ಗೊತ್ತಿದ್ದ, ನನ್ನ ಹೆಂಡತಿ - "ಸುಮ್ನೇ ಗುಳಿಗೇ ತೊಗೊಂಡು ಮಲಗಿ" ಅಂದಳು.
ಈ ಸಲ ಜಾಸ್ತಿ ಏನೂ ಮಾತಡಲಿಲ್ಲ. "ಇನ್ನೂ ಸ್ವಲ್ಪ ಹೊತ್ತು ನೋಡೊಣಾ" ಅಂದು ಸುಮ್ಮನಾದೆ.
ಅವಳು ಬಿಸಿ ನೀರಿಗೇ ಇಟ್ಟು, Hot-Water-Bag ನಲ್ಲಿ ಶಾಖ ಕೊಟ್ಟಳು; ತವ ಬಿಸಿ ಮಾಡಿ ಅದರಿಂದಲೂ ಶಾಖ ಕೊಟ್ಟಳು. ನೋವು ಮಾತ್ರ ಜಪ್ಪಯ್ಯಾ ಅನ್ನಲಿಲ್ಲ. ಕೊನೆಗೆ, ಸೋತು ಗುಳಿಗೆ ತೆಗೆದುಕೊಂಡೆ. ಇನ್ನೂ, ಮಲಗಲೂ ತೊಂದರನೇ ಆಗುತ್ತಿತ್ತು. ಸೀದಾ ಮಲಗಿದರೂ ನೋವು ಇತ್ತು, ಬೋರಲು ಮಲಗಿದರೂ ನೋವು ಕಾಣಿಸುತ್ತಿತ್ತು.



"ಆಂಬುಲೆನ್ಸ್ ಗೇ ಹೇಳೊಣವಾ?" ನಾನು ಕೇಳಿದೆ.
"೫-೧೦ ನಿಮಿಷ ನೋಡಿ. ಭುಜದಲ್ಲಿ ಏನೂ ಬಾವು ಕಾಣಿಸುತ್ತಿಲ್ಲ. ಇದು ಬರೀ ನೋವು ಮಾತ್ರ, ಒಳಗಡೆಯಿಂದ ಏನೂ ಆಗಿಲ್ಲಾ ಅನಿಸುತ್ತೇ", ಎಂದು ಹೇಳಿದಳು.


ಅವಳು ಹೇಳಿದ ಹಾಗೇ, ೫-೧೦ ನಿಮಿಷ ಕಳೆಯುವಷ್ಟರಲ್ಲಿ ಮಂಪರೂ ಬಂದಂಗಾಯಿತು. ಎಚ್ಚರವಾದಾಗ, ನಿನ್ನೇ ನಡೆದದ್ದೇಲಾ ಕನಸೇನು ಅನ್ನಿಸುತ್ತಿತ್ತು. ಭುಜದಲ್ಲಿ ನೋವು ಇರಲಿಲ್ಲ. ಹಾಸಿಗೇ ಮಡಚಿ, ಬಾತ್ ರೂಮ್ ಗೇ ಹೊರಟೇ.

Wednesday, April 6, 2011

ನೀವಿರದೇ

ಎಂಚಿನ ಸಾವು,
ಪವನೇಶ್ ಮಾರಾಯರೇ!

ಈ ವಿಧಿಯ, ಆ ಸೂತ್ರಧಾರಿಗೆ
ಮೊದಲು ಎರಡು ಮಾತು:
"HNY" ಮತ್ತು "ಅವನಜ್ಜಿ ಟೊಯ್"!

ಈ ವಿಧಿಯ, ಈ ಪಾತ್ರಧಾರಿಗೆ ಎರಡು ನುಡಿ:
ಆ ನಿಮ್ಮ ನಗೆ, ಹುಸಿ ನಗೆ, ಮುಗುಳ್ ನಗೆ
ಇಲ್ಲದ ನಿಮ್ಮ ವೃತ್ತಿಯ
ಚತುರ್-ಭಿತ್ತಿಯ,
ಬಿಕೋ ಎನ್ನುವಾ
ಮೂಖ ವೇದನೆ - ವಿರಹ ಸಂವೇದನೆ
ಕೇಳಲಾಗದೇ, ನೋಡಲಾಗದೇ
ಆ ಕಡೆಯ ಪಯಣಕ್ಕೆ
ಕೆಲದಿನಗಳ ತಡೆ ಒಡ್ಡಿರುವೆ!

ಈ ವಿರಾಮಕ್ಕೆ ವಿಷಾದವಿದೆ :(

ಏಳೀ, ಏದ್ದೇಳಿ
ಬೇಗನೇ ಗುಣ ಹೊಂದಿ,
ನಮ್ಮೊಂದಿಗೆ ಅನುದಿನ, ಅನುಕ್ಷಣ
ಬೆರೆತು,ಮರೆತು
ಮತ್ತೆ ಬೇಗನೇ ಮೊದಲಿನಂತಾಗಿ.

ಈ ವಿಧಿಯ, ಆ ಸೂತ್ರಧಾರಿಗೆ
ಕೊನೆಗೊಂದು ಪ್ರಾರ್ಥನೆ:
ರಸಿಕ ಭೋಜನ,
ರಮ್ಯ ನೋಟಗಳ ಛಾಯಚಿತ್ರಿಕರಣ,
ಉಲ್ಲಾಸದ ಕ್ರಿಕೆಟ್, ಶಿಖರಾಹೋಣ
ರಂಜನೆಯ ಕಾವ್ಯ-ನಾಟ್ಯ ,
ಸಂಗೀತ-ಸಾಹಿತ್ಯದ
ನಿಮ್ಮ ಕಲಾ-ಕರ್ಮಭೂಮಿ,
ನೀವಿಲ್ಲದ ಕಲೆ
ಬಲುದಿನ ನೋಡದಿರಲಿ,
ನಿಮ್ಮ ಓಡನಾಟದ
ನಿರಂತರ ನೆಲೆ,
ಬಲು ಬೇಗನೆ ಕಾಣಲಿ.

*"ನೀವಿಲ್ಲದ ಕಲೆ" ಸಾಲಿನಲ್ಲಿ ಕಲೆ = dark spot
* ಚತುರ್-ಭಿತ್ತಿ = 4 walls = cubicle