Friday, June 19, 2009

ಕಥೆ ಹೇಳಲು ಹೋಗಿ ಕತ್ತೆಯಾದ ನಾನು

ಧನ್ಯಾ ನನ್ನ ನಾದಿನಿಯ ಮಗಳು. ೩ ರಿಂದ ೪ಕ್ಕೆ ಹೋಗುತ್ತಿರುವ, ಸಿಕ್ಕಾಪಟ್ಟೆ ಕುತೂಹಲದ ಹುಡುಗಿ. ಬೀರೂರಲ್ಲಿ ಅಜ್ಜಿ-ಅಜ್ಜರ ಜೊತೆಗಿದ್ದಾಳೆ. ಅಜ್ಜನ ಮನೆ ಪಕ್ಕದಲ್ಲಿಯೇ, ಮುತ್ತಜ್ಜನ ಮನೆ. ಸಾಕಲ್ಲವೇ, ಬಾಲ್ಯದ ಜೀವನಕ್ಕೆ ಸ್ವರ್ಗವೇ ಇದ್ದ ಹಾಗೇ. ಬೀರೂರು ಸಣ್ಣ ಊರು. ಅಜ್ಜಿ ಮನೆಯಲ್ಲಿ ಬೊರ್ ಇಲ್ಲ. ಗಚ್ಚು ತುಂಬಿಸೊದು ರೂಢಿ.

ನಮ್ಮ ಅತ್ತೆ-ಮಾವನವರು( ಅಂದರೆ ಧನ್ಯಾಳ ಅಜ್ಜ-ಅಜ್ಜಿ) ಬೆಂಗಳೂರಿಗೆ ಸಂಬಂಧಿಕರ ಮದುವೆಗೆ ಬಂದಿದ್ದರು.ಅಜ್ಜ-ಅಜ್ಜಿ ಜೊತೆಗೇ ಧನ್ಯ ಕೂಡ ಬಂದಿದ್ದಳು. ಅವಳು ಬಂದಿದ್ದು ನಮಗೆ ಖುಶಿಯೊ ಖುಶಿ. ಅವಳಿಗೂ ಅಷ್ಟೆ ಸಂಭ್ರಮ. ನಮಗೆ ಯುಗಾದಿ-ಅವಳಿಗೆ ದೀಪಾವಳಿ. ಅವಳು ತಿಂಗಳುಗಳಿದ್ದಾಗಿನಿಂದಲೂ ನಾನು ಅವಳೊಂದಿಗೆ ತುಂಬಾ ಒಡನಾಡಿದ್ದೇನೆ. ಅದಕ್ಕೆ, ಮನೆಗೆ ಬಂದೊಡನೆ - ದೊಡ್ಡಪ್ಪ ಎಲ್ಲಿದಿ? ಏನು ಮಾಡ್ತಿದಿ? ಅದು ಏನು-ಇದು ಏನು? ಹೀಗೆ ಪ್ರಶ್ನೆಗಳ ಸುರಿಮಳೆ. ನಂತರ, ಬಾ ಅಡುಗೆ ಆಟ ಆಡೋಣ, ಸ್ನಾನ ಮಾಡಿಸೋ ಆಟ ಆಡೋಣ; ಆಮೇಲೆ, ಈ ಕಥೆ ಹೇಳು-ಆ ಕಥೆ ಹೇಳು ಅಂತ. ಹೇಳಿದ ಕಥೆಯನ್ನೇ ಹೇಳಿ-ಹೇಳಿ ನನಗೆ ಬೇಸರ; ಅದೇ ಕಥೆ-ಅದೇ ಕ್ಲೈಮಾಕ್ಸ್ ಕೇಳಲು ಅವಳಿಗೆ ಸಡಗರ.

ಹೀಗೆಯೇ
, ಅವಳಿಗೇ ಕಥೆಗಳನ್ನು ಹೇಳುವಾಗ ಘಟನೆಗಳಿವು: ನಾನು ಅವಳಿಗೆ ಮೊದಲ ಸಲ ಕಥೆ ಹೇಳುತ್ತಿದ್ದದ್ದು. ಇದು ಆ ಕಾಗೆ-ಹೂಜಿ ಕಥೆ. ನಿಮಗೆಲ್ಲಾ ಗೊತ್ತಿರಲೇಬಹುದು - ಕಾಗೆಗೇ ಬಾಯಾರಿಕೆಯಾಗಿ ನೀರನ್ನು ಅರಸಿ ಹೊಗುತ್ತದೆ. ಕೊನೆಗೊಂದು ಮನೆಯ ಮೇಲಿನ ಹೂಜಿವೊಂದರಲ್ಲಿ ನೀರನ್ನು ಕಾಣುತ್ತದೆ. ಆ ನೀರು ಕೆಳಮಟ್ಟದಲ್ಲಿರುತ್ತದೆ...ಹೀಗೆ ಆ ಕಥೆ ಮುಂದುವರಿಯುತ್ತದೆ. ಕಥೆ ಶುರು ಮಾಡುವ ಮೊದಲು ನನಗೊಂದು ಯೊಚನೆ ಬಂತು. ಸುಮ್ಮನೆ - "ಒಂದು ಊರಿನಲ್ಲಿ" ಅಂತಾ ಹೇಳುವ ಬದಲು "ಬೀರೂರು" ಅಂತಾ ಹೇಳಿದರೇ, ಇವಳು ಇದು ತನ್ನೂರಿನ ಕಥೆಯೆಂದು ಇನ್ನೂ ಕುತೂಹಲದಿಂದ ಕೇಳುತ್ತಾಳೆ ಎಂದಂದುಕೊಂಡೆ. ನನಗೆ ಹಿಗ್ಗೊ-ಹಿಗ್ಗು. ಏನೊ ಹೊಸತು ಪ್ರಯೊಗ ಮಾಡುತ್ತಿರುವೆನೆಂಬ ಖುಶಿ. ಶುರು ಮಾಡಿದೆ - "ಬೀರೂರಲ್ಲಿ ಒಂದು ಕಾಗೆ ಇತ್ತು. ಅದೊಂದು ದಿನ ತುಂಬಾ ಬಿಸಿಲಿತ್ತಂತೆ.ಆ ಕಾಗೆಗೇ ತುಂಬಾ ನೀರಡಿಕೆಯಾಗಿತ್ತು.ಅದು ಅಲ್ಲಿ-ಇಲ್ಲಿ ಎಲ್ಲ ಕಡೆ ನೀರನ್ನು ಹುಡುಕುತ್ತ ಇತ್ತು. ಅದಕ್ಕೆ ನೀರೆ ಸಿಗಲಿಲ್ಲ". ಅಲ್ಲಿಗೆ, ಧನ್ಯ - "ಹಾಗಿದ್ದರೆ, ಆದು ಅಜ್ಜನ ಮನೆಗೆ ಹೊಗಬಹುದಿತ್ತಲ್ಲ ದೊಡ್ಡಪ್ಪ. ಅಲ್ಲಿ ನೀರು ಸಿಗುತ್ತಿತ್ತು" ಎಂದಳು. ನಾನು ಒಂದು ಕ್ಷಣ ಅವಕ್ಕಾದೆ. ಕಥೆಯನ್ನು ಹಾಗೇ ಹೇಳೋಣ-ಹೀಗೇ ಹೇಳೋಣ ಅಂತ ನಾನೇ ಕಥೆಯಲ್ಲಿ ಎಷ್ಟು ಮಗ್ನನಾಗಿದ್ದೇನೆಂದರೆ, ಮುಂದೆ ಏನು ಹೇಳಬೇಕೊ ಗೊತ್ತೆ ಆಗಲಿಲ್ಲ. ಅವಳ ದೊಡ್ಡಮ್ಮ, ಅಂದರೆ ನನ್ನಾಕೆ, ಅಲ್ಲೇ ಕುಳಿತ್ತಿದ್ದಳು. ತಕ್ಷಣ - "ಇಲ್ಲ ಧನ್ಯ, ಅವತ್ತು ನೀರು ಬಂದಿರಲಿಲ್ಲ. ಅದಕ್ಕೆ ಮನೆಯಲ್ಲಿ ನೀರೇ ಇರಲಿಲ್ಲ". ಅಂದಳು. ಧನ್ಯಳ ಪ್ರತ್ಯುತ್ತರ ರೆಡಿಯಾಗಿಯೇ ಇತ್ತು - "ಹಾಗಿದ್ದರೆ, ಪಕ್ಕದ ಅಜ್ಜನ ಮನೆಯಲ್ಲಿ ಕೇಳಬಹುದಿತ್ತಲ್ಲ" ಅಂದಳು. ಅಲ್ಲಿಗೆ, ನನ್ನ ಹೆಂಡತಿ ಬಾಯಿಗೂ ಬೀಗ ಬಿತ್ತು. ಹಾಗೆಯೇ, ಕಥೆ ಕೂಡ ಮುಗಿದಿತ್ತು. ಏಕೆಂದರೆ, ಮುಂದೆ ಹೇಳಲು ಅವಳು ನನಗೆ ಬಿಡಲೇ ಇಲ್ಲ.ಅವಳಿಗೆ, ಆ ಕಥೆಯ ಕ್ಲೈಮ್ಯಾಕ್ಸಗಿಂತ ಸದ್ಯಕ್ಕೆ ಆ ಕಾಗೆ ಅಜ್ಜನ ಮನೆಗೇ ಯಾಕೆ ಹೋಗಲಿಲ್ಲ? ಅನ್ನೋದೆ ತಲೆಯಲ್ಲಿ ತುಂಬಿ ಹೋಯಿತು. ಕಾಗೆ, ಬೀರೂರು, ನನ್ನ ಹೊಸ ಪ್ರಯೊಗ ಎಲ್ಲ ಎಕ್ಕುಟ್ಟುಕೊಂಡು ಹೋಯಿತು!

ಇನ್ನೂ
ಎರಡನೇ ಘಟನೆ, ಕೆಲದಿನಗಳ ನಂತರ.ನಾನು ನಾಲಿಗೆ ಸುಟ್ಟುಕೊಂಡ ಬೆಕ್ಕಿನಂತೆ ಆಗಿದ್ದೆ. ಮತ್ತೊಮ್ಮೆ ಕಥೆ ಹೇಳುವ ಪ್ರಸಂಗ ಒದಗಿ ಬಂತು. ಈ ಸಲ ನನಗೆ ಗೊತ್ತಿತ್ತು - ಇವಳಿಗೆ ಕಥೆ ಹೇಳಿದರೆ ಅವಕ್ಕಾಗುವ ಸ್ಥಿತಿ ಬರೋದು ಗ್ಯಾರಂಟಿ ಅಂತ. ಅದಕ್ಕಾಗಿ ಯಾವುದೇ ಪ್ರಯೋಗಕ್ಕೆ ಕೈ ಹಾಕಲಿಲ್ಲ. ಈ ಸಲದ ಕತೆ ಒಗ್ಗಟ್ಟಿನದು. ನಾವು ಸಣ್ಣವರಿದ್ದಾಗ ಡಿಡಿ-೧ ರಲ್ಲಿ ಬರುತ್ತಿತ್ತು. ಬೇಡ-ಗುಬ್ಬಿಗಳ ಕಥೆ - "ಆ ಗುಬ್ಬಿಗಳ್ಳೆಲ್ಲ ಒಮ್ಮೆ ಮರದ ಕೆಳಗೆ ಬಿದ್ದ ಅಕ್ಕಿ ಕಾಳುಗಳನ್ನು ಹೆಕ್ಕುತಿರುತ್ತವೆ. ಅವಕ್ಕೆ ಬೇಡ ಬಲೆ ಬೀಸುತ್ತಾನೆ. ಅವೆಲ್ಲವೂ ಸೇರಿ ಆ ಬಲೆಯನ್ನು ಎತ್ತಿಕೊಂಡು ಬೇರೆ ಊರಿಗೆ ಹಾರಿ ಹೋಗುತ್ತವೆ. ಅಲ್ಲಿ ಇಲಿಗಳೊಂದಿಗೆ ಸ್ನೇಹ ಮಾಡಿ..." ಹೀಗೆ ಕಥೆ ಮುಂದುವರಿಯುತ್ತದೆ. ನಾನು ಶುರು ಹಚ್ಚಿಕೊಂಡೆ - "ಒಂದೂರಿನಲ್ಲಿ ಬಹಳಷ್ಟು ಗುಬ್ಬಿಗಳದ್ದವಂತೆ. ಅವಕ್ಕೆಲ್ಲಾ ಹೊಟ್ಟೆ ಹಸಿದಿತ್ತು. ಅಲ್ಲಿ ಒಂದು ಮರದ ಕೆಳಗೆ ಅಕ್ಕಿ ಕಾಳುಗಳು ಬಿದ್ದಿದ್ದವಂತೆ. ಅವೆಲ್ಲವು ನೆಲದ ಮೇಲಿದ್ದ ಅಕ್ಕಿಯ ಕಾಳುಗಳನ್ನು ತಿನ್ನಲು ಶುರುಮಾಡಿದವಂತೆ...". ಅಷ್ಟೇ!, ಅಲ್ಲಿಗೆ ಅವಳದೊಂದು ಬ್ರೇಕ್ ಬಿತ್ತು - "ದೊಡ್ಡಪ್ಪ, ಆ ಗುಬ್ಬಿಗಳು ನೆಲದ ಮೇಲೆ ಬಿದ್ದದ್ದನ್ನು ಯಾಕೆ ತಿನ್ನುತ್ತಿದ್ದವು? ಅದು ಹೊಲಸಾಗಿರುತ್ತಲ್ಲಾ. ತಟ್ಟೆಯಲ್ಲಿರೊದನ್ನ ತಿನ್ನಬೇಕು" ಅಂದಳು. ಈ ಸಲವೂ ನಾನು ಒಂದು ಕ್ಷಣ ಅವಕ್ಕಾದೆನಾದರು, ಪ್ರಿಪೇರ್ ಆಗಿದ್ದನಲ್ಲಾ ಅದಕ್ಕೆ " ಜೋರ್ ಕಾ ಜಟಕಾ ಧೀರೆ ಸೇ ಲಗಾ". ಇಲ್ಲಮ್ಮಾ ಅವಕ್ಕೆ ಗೊತ್ತಗೊಲ್ಲ. ಅವು ಹಾಗೇಯೆ ತಿನ್ನೊದು ಅಂತಾ ಹೇಳಿ ಕಥೆ ಮುಂದುವರಿಸಿಬಿಟ್ಟೆ. ಅಷ್ಟೆ ಅಲ್ಲಾ ಈ ಸಲ ಕಥೆ ಮುಗಿಸಿದೆ ಕೂಡ!

ಹೀಗೆ - ನನ್ನ ಮಗಳಿಗೆ ಕಥೆ ಹೇಳಲು ಹೋಗಿ ನನ್ನದೇ ಒಂದು ಕಥೆ ಆಗೋಯ್ತು.

4 comments:

visa questions said...

Good One,Thank you Sir for warning me before adding any creativity.

Pavanesh said...

Chennagittu..Kiran..nange nanna annana magala tarale prashnegala nenapytu...Chennagittu

Unknown said...

This is one of the best I guess!! HA..HA...HA! DHANYA.....DHANYA kanammma...

Anonymous said...

Very cute :)) Children are far beyond our imagination always :)